ಮಾಧುರ್ಯಭರಿತ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ‘ಏನೆಂದು ಹೆಸರಿಡಲಿ ಚಿತ್ರ ಈಗ ಮತ್ತೊಂದು ಗರಿಮೆಯನ್ನು ಹೆಚ್ಚಿಸಿಕೊಂಡಿದೆ. ಮಲೆ ಮಾದೇಶ್ವರನ ಕುರಿತಾದ ಒಂದು ಹಾಡು ಇದೀಗ ನಿರ್ದೇಶಕ ಹಾಗೂ ನಟ ಜೋಗಿ ಪ್ರೇಮ್ ಅವರ ಕಂಠದಲ್ಲಿ ಮೂಡಿಬಂದಿದೆ. ಜೋಗಿ ಚಿತ್ರದ ನಂತರ ಪ್ರೇಮ್ ಅವರು ಇಂಥಾ ಹಾಡನ್ನು ಮೊದಲ ಸಲ ‘ಏನೆಂದು ಹೆಸರಿಡಲಿ ಚಿತ್ರಕ್ಕಾಗಿ ಹಾಡಿದ್ದಾರೆ. ಜೋಗಿ ಪ್ರೇಮ್ ಈ ಹಾಡನ್ನು ಹಾಡುವಾಗ ವಿಶೇಷ ವಸ್ತ್ರ ಧರಿಸಿ ಭಕ್ತಿ ಭಾವದಿಂದ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ. ‘ಏನೆಂದು ಹೆಸರಿಡಲಿ ಚಿತ್ರಕ್ಕೆ ಈ ಹಾಡು ಮುಕುಟ ಪ್ರಾಯವಾಗಲಿದೆ. ಈ ಹಾಡಿನ ಚಿತ್ರೀಕರಣ ಈಗಾಗಲೇ ಸಂಪೂರ್ಣ ಗೊಂಡಿದೆ.
ಷುಗರ್ ಕ್ಯೂಬ್ ಕ್ರಿಯೇಷನ್ ಸಂಸ್ಥೆಯ ಚೊಚ್ಚಲ ಕಾಣಿಕೆಯಾದ, ಶ್ರೀನಿವಾಸ್ ಕುಲಕರ್ಣಿ ಹಾಗೂ ಶ್ರುತಿ ಕುಲಕರ್ಣಿ ಅವರ ನಿರ್ಮಾಣದ ಚಿತ್ರಕ್ಕೆ ‘ಅಡ್ಡ್ಡಡ್ಡ ವಿಭೂತಿ ಇಟ್ಟು ಮನತುಂಬಾ ಭಕ್ತಿಯನಿಟ್ಟು ನಿನ್ನ ಧ್ಯಾನ ಮಾಡ್ತಾ ಕುಂತಿವ್ನಿ ಮಾದಯ್ಯ.... ಹಾಡನ್ನು ಜೋಗಿ ಪ್ರೇಮ್ ಅವರು ಅಶ್ವಿನಿ ಡಿಜಿಟಲ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸುರೇಂದ್ರನಾಥ್ ಅವರ ರಾಗ ಸಂಯೋಜನೆಯಲ್ಲಿ ಹಾಡಿದ್ದಾರೆ. ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ರವಿ ಬಸಪ್ಪನದೊಡ್ಡಿ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ‘ಪ್ರಿಯತಮ ಅಥವಾ ತಾಯಿಎಂಬ ಗಂಭೀರವಾದ ವಿಚಾರ ಈ ಚಿತ್ರದಲ್ಲಿ ನಾಯಕಿಗೆ ಎದುರಾಗುತ್ತದೆ. ಈ ಕಾಲಮಾನದ ಎಲ್ಲ ವಯೋವರ್ಗದವರಿಗೂ ಸಲ್ಲುವ, ಪ್ರತಿಯೊಬ್ಬರೂ ಸಂಸಾರ ಸಮೇತರಾಗಿ ನೋಡಬಹುದಾದ ಚಿತ್ರ ‘ಏನೆಂದು ಹೆಸರಿಡಲಿ ಎಂದು ಹರ್ಷದಿಂದ ನಿರ್ದೇಶಕ ರವಿ ತಿಳಿಸುತ್ತಾರೆ.
ಸಹ ನಿರ್ಮಾಪಕರಾಗಿ ಮಧು ಕುಲಕರ್ಣಿ, ಭಾರತಿ ಗುನಳ್ಳಿ, ಅನುಷ ಕುಲಕರ್ಣಿ ಜೊತೆಯಾಗಿದ್ದಾರೆ. ಕಥೆ ಹಾಗೂ ಚಿತ್ರಕಥೆ ಪೂರ್ಣೇಶ್ ಸಾಗರ, ಜೋಗಿ (ಎಚ್. ಗಿರೀಶ್ ರಾವ್) ಅವರ ಸಂಭಾಷಣೆ, ಮಂಜುನಾಥ್ ಬಿ ನಾಯಕ್ ಛಾಯಾಗ್ರಹಣ, ಸುರೇಂದ್ರನಾಥ್ ಸಂಗೀತ, ಶ್ರೀಕಾಂತ್ ಸಂಕಲನ, ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಕವಿರಾಜ್, ದೊಡ್ಡರಂಗೇಗೌಡ ಹಾಗೂ ಪೂರ್ಣೆಶ್ ಸಾಗರ ಗೀತ ಸಾಹಿತ್ಯ ಒದಗಿಸಿದ್ದಾರೆ.
ಕಥಾ ನಾಯಕನಾಗಿ ಅರ್ಜುನ್ ಹಾಗೂ ರೋಜಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಸಂಕೇತ್ ಕಾಶಿ ಅವರ ಕಡೆಯ ಚಿತ್ರ. ಚಿತ್ಕಲಾ ಬಿರಾದರ್, ಮಿಲಿಂದ್ ಗುಣಾಜಿ, ಸುನೇತ್ರ ಪಂಡಿತ್, ಎಂ ಎಸ್ ಉಮೇಶ್, ಸೂರಜ್, ಬೇಬಿ ಸೇವಂತಿ ಮತ್ತಿತರರು ತಾರಾಗಣದಲ್ಲಿದ್ದಾರೆ.